"Services for the growth by the people for the people - Our Motto"
ಉಡುಪಿ : ನಗರದ ಪ್ರತಿಷ್ಠಿತ ಎಂಜಿಎಂ ಕಾಲೇಜು ಬಳಿ ಕಳೆದ ಮೂರು ವರ್ಷಗಳಿಂದ ಕಾರ್ಯಚರಿಸುತ್ತಿರುವ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ನ ವಾರ್ಷಿಕ ಮಹಾಸಭೆಯು ನೂತನ ರವೀಂದ್ರ ಮಂಟಪ ಎಂಜಿಎಂ ಕಾಲೇಜು ಆವರಣದಲ್ಲಿ ಸದಸ್ಯರ ಸಮ್ಮುಖದಲ್ಲಿ ನಡೆಯಿತು.
ಸೊಸೈಟಿಯ ಅಧ್ಯಕ್ಷೆ ಜೆಸಿಂತಾ ಡಿಸೋಜಾ ಅಧ್ಯಕ್ಷತೆ ವಹಿಸಿ, ಸಭೆಯನ್ನು ನಡೆಸಿದರು. ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ನ ಉಡುಪಿ ವಿಭಾಗದ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ ಎಸ್ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಸೊಸೈಟಿಯ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಜೀವನ್ ಡಿಸೋಜ, ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಗತ ವರ್ಷದಲ್ಲಿ 19 ಕೋಟಿ ವ್ಯವಹಾರ ಆಗಿದ್ದು, ಸೊಸೈಟಿ ಪ್ರಸ್ತುತ 19.50 ಲಕ್ಷ ಲಾಭದಲ್ಲಿದೆ. ಮಾತ್ರವಲ್ಲದೆ ಎರಡು ವರ್ಷಗಳ ಬೆಳವಣಿಗೆಯಲ್ಲಿ ಉತ್ತುಮ ರೀತಿಯಲ್ಲಿ ಸ್ಪಂದಿಸಿದ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಿದರು.
ಕಳೆದ ಮೂರು ವರ್ಷಗಳಲ್ಲಿ ಗ್ರಾಹಕರಿಂದ ಸೊಸೈಟಿಗೆ ಉತ್ತಮ ವ್ಯವಹಾರ ದೊರಕಿದ್ದು, ದಿನೇ ದಿನೇ ಉತ್ತಮ ಪ್ರಗತಿ ಹೊಂದುತ್ತಿದೆ. ಗೃಹ, ಚಿನ್ನಾಭರಣ ಮತ್ತು ವಾಹನ ಸಾಲ ನೀಡಲಾಗುತ್ತಿದೆ. ಮಾತ್ರವಲ್ಲದೆ ನಿರ್ದೇಶಕರುಗಳ ಸಹಕಾರದೊಂದಿಗೆ ವಿವಿಧ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಉಡುಪಿ ಸಿಂಡಿಕೇಟ್ ಸೌಹಾರ್ದ ಸೊಸೈಟಿ ಮಾಡುತ್ತಿದೆ ಎಂದು ಸೊಸೈಟಿಯ ಉಪಾಧ್ಯಕ್ಷ ಅಜಯ್ ಕುಮಾರ್ ಸಭೆಯಲ್ಲಿ ತಿಳಿಸಿದರು.
ವಾರ್ಷಿಕ ಮಹಾಸಭೆಯಲ್ಲಿ ಲೆಕ್ಕಪತ್ರ ಮತ್ತು ಮುಂದಿನ ಯೋಜನೆಗಳನ್ನು ಮಂಡಿಸಲಾಯಿತು. ಸೊಸೈಟಿ ನಿರ್ದೇಶಕರುಗಳಾದ ಪ್ರಶಾಂತ್ ಕುಮಾರ್, ರೋಹನ್ ಕುಲಾಸೋ, ಜೂಡ್ ನೆಲ್ಸನ್ ಡಿಸೋಜಾ, ಗುರು ಚರಣ್, ಪ್ರತಿಭಾ, ಸೀಮಾ, ಪ್ರಶಾಂತಿ ಪ್ರಿಯ ಕಸ್ತಲಿನೋ, ಅಜಿತ್ ಉಪಸ್ಥಿತರಿದ್ದರು. ಸೊಸೈಟಿಯ ಸಿಬ್ಬಂದಿಗಳು ಪ್ರಾರ್ಥನ ಗೀತೆ ನೆರವೇರಿಸಿದರೆ, ಹಾಜರಾದ ಎಲ್ಲಾ ಸದಸ್ಯರಿಗೂ ಭೋಜನದ ವ್ಯವಸ್ಥೆ ಮತ್ತು ನೆನಪಿನ ಕಾಣಿಕೆ ನೀಡಲಾಯಿತು.
ಪ್ರಧಾನ ಶಾಖೆ ವ್ಯವಸ್ಥಾಪಕಿ ಫೆಲ್ಸಿ ಡಿಸೋಜ ಸ್ವಾಗತಿಸಿದರೆ, ಲೆಕ್ಕ ವ್ಯವಸ್ಥಾಪಕರಾದ ಕುಮಾರ್ ಎಚ್ ಎನ್ ಧನ್ಯವಾದ ಸಮರ್ಪಿಸಿದರು. ನಿರ್ದೇಶಕ ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.